Thursday, November 20, 2014
Monday, November 17, 2014
ಜಗಲಿ ಕಟ್ಟೆ : ‘‘ಯಡಿಯೂರಪ್ಪ ಭೀಷ್ಮ ಅಂತೆ ’’ - ಮಾಲತೇಶ್ ಅರಸ್ ಹರ್ತಿಮಠ
ಪಾತ್ರವರ್ಗ: ಪುಕ್ಸಟ್ಟೆ ಪಟ್ರೆ, ಸುಮ್ಕಿರಮ್ಮ, ಪರಮೇಸಿ. ಶಂಭೋನಂದ ಸ್ವಾಮಿ,
‘‘ಯಡಿಯೂರಪ್ಪ ಭೀಷ್ಮ ಅಂತೆ ’’
ಮಾಜಿ ಸಿಎಮ್ಮೂ ಯಡಿಯೂರಪ್ಪ ಅದ್ಯಾಕೋ ಇತ್ತಿತ್ಲಾಗೆ ಮಹಾಭಾರತ್ವ, ರಾಮಾಯಣ್ವ ನೆನಪಾಡ್ಕೋತಾವ್ರೇ ಕಣಲೇ ಪರಮೇಸಿ ಅಂತ ಪುಕ್ಸಟ್ಟೆ ಪಟ್ರೆಯ ಕಿವಿವೂದಿದ.
ಮೊನ್ನೆ ತುಮಕೂರನಾಗೆ ನೇಕಾರರ ಸಮಾವೇಶದೊಳಗೆ ನಿಂತು ಬಿಜೆಪಿ ಮೇಲೆ ಭಲೇ ಬ್ರಹ್ಮಾಸ್ತ್ರವ ಬಿಟ್ಟವ್ರೆ ಕಣಲೇ. ಅಬ್ಬಾಬ್ಬಾಬ್ಬ. ಅದೇನು ಸ್ಪೀಡು ಅಂತೀಯ, ಅದೇನು ಹುಮ್ಮಸ್ಸು ಅಂತೀಯ, ಶಿಕಾರಿಪುರದಾಗಿ ನಿಂತು ಮಾತಾಡ್ತಾ ಇವ್ನೀ ಅಂತಾನೇ ತಿಳಕಂಡು ಮಾತಾಡ್ತಾ ಮಾತಾಡ್ತಾ ಚಕ್ರವ್ಯೆಹ ನುಗ್ಗಿ ವಾಪಾಸು ಬರದುಕೆ ಆಗ್ದಲೇ ಇರಾಕೆ. ನಾ ಅಭಿಮನ್ಯು ಅಲ್ಲಾ, ನಾನು ನಾನು ನಾನು ಚಕ್ರವ್ಯೆಹವ ಮುರಿದು ಹೊರಗೆ ಬರೋ ತಾಕತ್ತಿರೋ ಅರ್ಜುನ ಅಂತ ಬೊಬ್ಬಿಟ್ಟವ್ರೇ ಕಣಲೇ ಅಂದ.
ಅದೇ ಸಮಯಕ್ಕೆ ಸುಮ್ಕಿರಮ್ಮ ಕೊಡ ಇಡ್ಕಂಡು ನೀರಿಗೆ ಅಂತ ಬರ್ತಾ ಇದ್ಲು. ಯಡಿಯೂರಪ್ಪ ಅಂತ ಹೆಸರು ಕೇಳಿದ ಕೂಡಲೇ ಸುಮ್ಕಿರಮ್ಮ ಕೈಲಿ ಸುಮ್ಕಿರಕ್ಕೆ ಆಗ್ಲಿಲ್ಲಾ. ಏನ್ರೋ ಅದು ಅಂದ್ಲು. ಪಟ್ರೆ ಹಿಂಗಿಗೆ ಹಿಂಗಿಗೆ ಕಣಕ್ಕಾ ಅಂತ ಹೇಳ ತಡಾ ಖುಷಿಯಾಗ್ ಬುಡದ.
ಅಯ್ಯೋ ಅದಲ್ಲಾ ಕಣಕ್ಕಾ ಇವತ್ತು ಹಳೇ ಪತ್ರಕರ್ತ ಹೊಸ ಮಿನಿಸ್ಟ್ರು ತಗಡು ಶಿವಣ್ಣಅಲ್ಲಾಲ್ಲಾ ಸೊಗಡು ಶಿವಣ್ಣ. ಮತ್ತೆ ಟಿವಿ ಐಕ್ಲು ಮೈಕ್ ಮುಂದೆ ನಿಂತು ಮಾತಾಡವ್ರೇ. ಏನತ್ತಾ ಅಂದ ಪರಮೇಸಿ.
ಅದೇ ಕಣಲೇ ನಮ್ ಯಡಿಯೂರಪ್ಪ ಅರ್ಜುನ ಅಲ್ಲಾ ಅವ್ರ ಬೀಷ್ಮ ಅಂತ.
ಅಲ್ಲಾಲ್ಲೇ, ಅತ್ಲಾಗೇ ಅಭಿಮನ್ಯು ಅಲ್ಲಾ ಅರ್ಜುನ ಅಂತಾರೆ. ಇತ್ಲಾಗೆ ಶಿವಣ್ಣ. ಅವ್ರ ಅರ್ಜುನ ಅಲ್ಲಾ ಭೀಷ್ಮ ಅಂತಾವ್ರೇ ಏನಲೇ ಇದು ಕಿತಾಪತಿ. ಅಂದ ಪುಕ್ಸಟ್ಟೆ ಪಟ್ರೆ.
ಇಷ್ಟಾತನಕ ಸುಮ್ಕಿದ್ದ ಸುಮ್ಕಿರಮ್ಮ ‘ಅದು ನಮ್ ಯಡಿಯೂರಪ್ಪಗೆ 40 ವರ್ಷಗಳಿಂದ ಸರ್ವಿಸ್ ಆಗದೇ ನೋಡು ಅದಕ್ಕೆ ಸೀನಿಯರ್ರು. ಅಂತ ಶಿವಣ್ಣ ಭೀಷ್ಮ ಅಂತ ಹೇಳಿದಾರೆ ಅನ್ನಾದ.
ಅಯ್ಯೋ ಸುಮ್ನಿರಲೇ ಪುಕ್ಸಟ್ಟೆ. ಶಿವಣ್ಣಾನು ಸುಮ್ಕೆ ಅಂದಿರಲ್ಲಾ. ಈ ಯಡಿಯೂರಪ್ಪ ತನಗೆ ಯಂಗೆ ಬೇಕೋ ಅಂದಾ ಮಾತಾಡೋದನ್ನ ನೋಡಕ್ಕಾಗದೇ ಮನಸ್ಸಲ್ಲಿ ಮೆಟ್ರೋ ರೈಲು ಓಡಾಡಿರುತ್ತೆ. ವಯಸ್ಸಾಗಿರೋ ಮುದುಕ ಭೀಷ್ಮಾ ಆಗ್ದಲೇ ಅರ್ಜುನನ ಆಗಾಕಾಗುತ್ತಾ ಅಂತ ಕಿಂಡಲ್ ಮಾಡಾವ್ರೆ ಕಣೇ ಸುಮ್ಕೀರಮ್ಮ ಅಂದ.
ಹೌದೌದು. ಅರ್ಜುನುಗಾದ್ರೆ ಬತ್ತಳಿಕೆಯಲ್ಲಿ ನಾಲೈದು ಬಾಣಗಳಿರ್ತಾವೆ. ಭೀಷ್ಮಾ ಆದ್ರೆ ಬಾಣಗಳಾ ಹಾಸಿಗೇನೇ ಇರುತ್ತೆ. ಹೈ ಕಮಾಂಡ್ ಮೇಲೆ ಲೋ ಕಮಾಂಡ್ ಮೇಲೆ ದಿನಾಲು ಬಿಡಕ್ಕೆ ಸರಿಯೋಗಿತ್ತೆ ಅಂದ ಪರಮೇಸಿ.
ಅದೇ ಸಮಯಕ್ಕೆ ಸರಿಯಾಗಿ ದಾರಿಲೀ ಶಂಭೋನಂದ ಸ್ವಾಮಿ ಹೋಕ್ತಾ ಇದ್ರು. ಯಡಿಯೂರಪ್ಪ ಅಂತ ಕಿವಿಗೆ ಬಿದ್ ಕೂಡಲೇ .. ನಮ್ಮ ಶಂಬೋಮಠಕ್ಕೆ ಅವ್ರ 5 ಕೋಟಿ ಅನುದಾನ ಕೊಟ್ಟಿದ್ರು. ಅದೇನೋ ಮಣ್ಣ ತಿನ್ನಕ್ಕೋಗಿ ಸಿಗೆಬಿದ್ದು ಶಂಭೋ ಅಂದ್ರು ಪಾಪ ಅಂತ ರಾಗ ಏಳಿತಲೇ...
ಇವಾಗ ಬಿಜೆಪಿ ಬಿಟ್ಟು ಅದೇನೋ ಕೆಜೆಪಿ ಅಂತ ಹಿಡಕಂಡವ್ರೆ. ಆ ಕೆಜೆಪಿ ಸಂಸ್ಥಾಪಕನೂ ಇಗಾಗ್ಲೇ ಮುಂಡಾ ಮೋಚಿದಾನೇ ಅಂತಲೇ, ಬಳ್ಳಾರಿ ರೆಡ್ಡಿ ಧಣಿಗಳನ್ನು ಹಿಡ್ಕಂಡು ಅಧಿಕಾರಕ್ಕೆ ಬಂದ ಯಡ್ಡಿ ಇದೀಗ ಅದೇ ಬಳ್ಳಾರಿಯಲ್ಲೇ ಹಣ ನುಂಗಿರೋ ಕೆಜೆಪಿ ಹಿಡ್ಕಂಡ್ ಏನ್ ಮಾಡ್ತಾರೋ ಅಂತ ಮೆಲು ದನಿಯಲ್ಲಿಯೇ ಸುಮ್ಮನಾದ್ರು ಶಂಭೋನಂದ ಸ್ವಾಮಿ.
ಅರೇ ಹೋಗಲೇ ಈ ಬಿಜೆಪಿ, ಕೆಜೆಪಿ ಅಂತ ಇನ್ನ ಭಾಷಣವಾ ಕೇಳಕ್ಕೇ ಆಗಲ್ಲಾ ಅಲ್ಲಿ ದೆಲ್ಲಿಲಿ ಸೋನಿಯಾ ಮೇಡಂ ಮಿನಿಸ್ಟುಗಳಿಗೆ ರಾಜೀನಾಮೆ ನೀಡಿ ಅಂತ ಹೇಳವ್ರೆ. ಆಯಮ್ಮನ ಮಾತು ಅಂದ್ರೆ ಅದಪ್ಪ ಖಡಕ್ ನಮ್ಮ ಎಸ್ಸೆಮ್ ಕೃಷ್ಣ ರಾಜೀನಾಮೆ ನೀಡಿ ಕನ್ನಡವೇ ನಮ್ಮಮ್ಮ. ಅವಳಿಗೆ ಕೈ ಮುಗಿಯಮ್ಮ ಅಂತ ಮತ್ತೆ ರಾಜ್ಯದಲ್ಲಿ ಕೈನ ಅಧಿಕಾರಕ್ಕೆ ತರ್ತೀನಿ ಅಂತ ಬಂದಾವ್ರೆ.
ಅದೇನರಾ ಹೇಳಲೇ ಪುಕ್ಸಟ್ಟೆ. ರಾಜಕೀಯ ಅಂದ್ರೆ ಕೈದು. ಸಂಪುಟದಲ್ಲಿ ಹಿರಿಯರು. ಪಕ್ಷದಲ್ಲಿ ಕಿರಿಯರು. ಸಿದ್ರಾಮಯ್ಯ ಮನದೊಳಗಿರೋ ಸಾಮಾಜಿಕ ನ್ಯಾಯ ಆಗದೇ ಅಂತಾಲೋ ಅಂದ ಪರಮೇಸಿ.
ಅರೇ ಕರೆಂಟ್ ಹೋತಲೇ... ಆ ಶೋಭಕ್ಕ ದಿನಾಲೂ ಸಂಜೆ ಹೊತ್ತಗೇ ಕಂರೆಂಟ್ ತಗೀತಳಲ್ಲೋ ಪುಕ್ಸಟ್ಟೆ ಶೋಭಕ್ಕ ಯಾಂಕಂಗೆ ಮಾಡ್ತಾಳೋ. ಕೆಜೆಪಿಗೆ ಮಹಿಳಾ ಅಧ್ಯಕ್ಷೆ ಆಗ್ಬಿಟ್ಟು ಸಾಯಾಬ್ರು ಜೊತೆಯಾಗೆ ರಾಜ್ಯ ಸುತ್ತಾ ಬಿಟ್ಟು ಇನ್ನು ಬಿಜೆಪಿ ಅಲ್ಲೇ ಇದಾಳಪ್ಪ. ಅಂತ ಕೊಡ ಹಿಡಕಂಡೇ ನಿಂತ ಸುಮ್ಕಿರಮ್ಮ ಹೇಳಿದ ಕೂಡಲೇ
ಶಂಭೋನಂದ ಸ್ವಾಮಿ.. ಶಿವ ಶಿವ ನಾನ್ ಬರ್ತಿನಣ್ರಪ್ಪ ಅಂತ ಹೊರಟ ಬೆನ್ನಲ್ಲೆ......
ಪುಕ್ಸಟ್ಟೆ ಪಟ್ರೆ ಕವಿಯಾದ
‘‘ಅಭಿಮನ್ಯು ಅಲ್ಲಾ ಅರ್ಜುನ ಅಂದರು
ನಮ್ಮ ಮಾಜಿ ಸಿಮ್ಮು ಯಡ್ಡಿ
ಕೆಜೆಪಿ ಬತ್ತಳಿಕೆಯಲಿ ಇನ್ನೂ
ಬಿಲ್ಲು ಇಲ್ಲಾ ಬಾಣವೂ ಇಲ್ಲ
ಉಳಿಯೋದು ಊದಿನ ಕಡ್ಡಿ
ಶಕ್ತಿ ಪ್ರದರ್ಶನಕ್ಕೆ ಸಿದ್ದವಾಗಿದೆ
ರಾಜ್ಯದಲಿ ಕಾಂಗ್ರೇಸ್ಸು
ಸಂಪುಟದಲ್ಲಿ ಹಿರಿಯರು.
ಪಕ್ಷದಲ್ಲಿ ಕಿರಿಯರು
ರಾಜ್ಯದಲ್ಲಿ ಮಾಡ್ಬೇಕು
ಬಿಜೆಪಿ, ಜೆಡಿಎಸ್ ಸರ್ಕಸ್ಸು ’’
ಸೂಪರ್ ಕಣಲೇ ಪುಕ್ಸಟ್ಟೆ ಅಂತ ಸುಮ್ಕಿರಮ್ಮ ಎನ್ನುತ್ತಲೇ, ಚಪ್ಪಾಳೆ ತಟ್ಟಿದ ಪರಮೇಸಿ ಕರೆಂಟ್ ಬಂತು. ಮೆಲ್ಲಗೆ ಜಗಲಿ ಕಟ್ಟೆ ಖಾಲಿಯಾಯ್ತು.
-ಮಾಲತೇಶ್ ಅರಸ್ ಹರ್ತಿಮಠ
Thursday, November 13, 2014
ಬನ್ನಿ ನಮ್ಮ ಬದುಕನ್ನು ನಾವೇ ಸುಂದರವಾಗಿಕೊಳ್ಳೋಣ.... ಮಾಲತೇಶ್ ಅರಸ್ ಹರ್ತಿಮಠ ವಿಜಯವಾಣಿ.ಬೆಂಗಳೂರು 9480472030
ಬದುಕನ್ನು ಸುಂದರವಾಗಿಸುವ ಅಂಶಗಳಾವುವು...
- ಮಾಲತೇಶ್ ಅರಸ್ ಹರ್ತಿಮಠ
ಛೇ.. ಯಾಕೋ ನನಗೆ ಈ ಬದುಕೇ ಬೇಡ ಅನ್ನಿಸಿದೆ. ಯಾವಾಗ ನೋಡಿದ್ರೂ ಟೆನ್ಷ್ಷನ್ ಮಾರಾಯ. ಬೆಳಗ್ಗೆ ಎದ್ದಾಗಿನಿಂದ ಇಲ್ಲಿ ತನಕ ಯಾಕೋ ಮನಸ್ಸೇ ಸರಿ ಇಲ್ಲಾ.. ಹೀಗೆ ಸದಾ ಕಾಲವೂ ಗುನುಗುಡುವ ಮನಸ್ಸುಗಳಿಗೇನು ಕೊರತೆ ಇಲ್ಲ. ಆದ್ರೆ ಇಲ್ಲಿ ನಾವು ಸೊಲುತ್ತಿರುವುದಾದರೂ ಹೇಗೆ. ಸೋಲನ್ನೊಪ್ಪಿಕೊಳ್ಳುತ್ತಿರುವುದಾದರೂ ಹೇಗೆ. ಇದೆಲ್ಲವನ್ನು ನಾನಿಲ್ಲಿ ಬಿಚ್ಚಿಟ್ಟಿದ್ದೇನೆ.
ಹೌದು.. ನನ್ನ ಬದುಕು ಸುಂದರವಾಗಿರಬೇಕು. ನಾನು ಸದಾ ಕಾಲವೂ ಖುಷಿಯಾಗಿರಬೇಕು... ನಾನು ಬದುಕಿನಲ್ಲಿ ಗುರಿ ಮುಟ್ಟಬೇಕು. ಹೀಗೆ ಬೇಕುಗಳ ಪಟ್ಟಿ ಮಾಡುತ್ತಲೇ ಸಾಗಿದರೇ ಇಲ್ಲಿ ಬದುಕು ಸುಂದರವಾಗೊಲ್ಲ, ಬದಲಿಗೆ ನಾವು ಬದುಕನ್ನು ಸುಂದರ ವಾಗಿಸುವ ಅಂಶಗಳಾವುವು ಎಂಬುದನ್ನು ಅರಿಯಬೇಕು.
ನಾನು ಇಲ್ಲಿ ಮೆಲ್ಲಗೆ ಆಲೋಚಿಸಿ, ಚಿಂತಿಸಿ ಬರೆದವಲ್ಲ ಬದಲಿಗೆ ಎಲ್ಲವೂ ಇದ್ದರೇ ಅಲ್ಲಿ ಬದುಕು ಹಸನಾಗಿರುತ್ತದೆ ಎಂಬ ಬೃಹತ್ ಆಕಾಂಕ್ಷೆ ಎಂಬುದು ಇಲ್ಲಿದೆ.
ಪ್ರೀತಿ :
ನಿಜಕ್ಕೂ ಪ್ರೀತಿ ಎನ್ನುವುದು ಪ್ರತಿಯೊಬ್ಬರಲ್ಲೂ ಅಡಗಿರಬೇಕಾದ ವಸ್ತುವಾಗಿದೆ. ಇಲ್ಲಿ ಹೃದಯದೊಂದಿಗೆ ಮಾತನಾಡುವಾಗ ನಮಗೆ ಪ್ರೀತಿಯ ಆಸರೆ ಬೇಕೇ ಬೇಕು. ಪ್ರೀತಿ ಮಾಯೆ ಹುಷಾರು ಎಂಬ ಹಾಡಿದೆ. ಆದರೇ ಅದು ಬದುಕನ್ನು ರೂಪಿಸಿಕೊಳ್ಳಬೇಕೆನ್ನುವುದಕ್ಕಿಂತ ಮುಂಚಿನ ಮಾತಾಗಿರುತ್ತದೆ. ಆದ್ರೆ ನಿಜಕ್ಕೂ ಬದುಕು ಸುಂದರವಾಗಿರಲು ಪ್ರೀತಿ ಅತ್ಯವಶ್ಯ. ಪ್ರೀತಿಸುವ ಮನಸ್ಸು ಬೇಕೇ ಬೇಕು. ನಮ್ಮಲ್ಲಿ ಎಲ್ಲರೂ ನಮ್ಮವರೆಂದು ಪ್ರೀತಿಸುವ ಮನಸ್ಸಿದ್ದರೇ ಅಲ್ಲಿ ಬದುಕು ಸುಂದರ ಸುಮಧುರ.
ಆನಂದ :
ಸದಾ ಕಾಲವು ನಾವು ಸಂಭ್ರಮಿಸುತ್ತಲೇ ಇರಬೇಕೆಂದರೇ ನಮಗೆ ಆನಂದ ಮುಖ್ಯ. ನಾನು ನಗುನಗುತ್ತಲೇ ಎಲ್ಲವನ್ನು ಸ್ವೀಕರಿಸಬೇಕಿದೆ. ನಗು ನಗುತ್ತಲೇ ಎಲ್ಲವನ್ನು, ಎಲ್ಲರನ್ನು ಗೌರವಿಸಬೇಕಾಗುತ್ತದೆ. ಮನದೊಳಗೊಂದು ಹೊರಗೊಂದು ಇರುವ ಬದುಕು ಎಲ್ಲವನ್ನು ಆನಂದದಿಂದ ಸ್ವೀಕರಿಸಿದರೇ ಬದುಕು ನಿಜಕ್ಕೂ ನೂರಕ್ಕೆ ನೂರರಷ್ಟು ಸುಂದರ ಸುಮಧುರ.
ಕಾಳಜಿ: ಇಂದು ಕಾಳಜಿ ಎಂಬುದನ್ನು ಯಾರು ರೂಢಿಸಿಕೊಂಡಿರುತ್ತಾರೋ ಅಲ್ಲಿ ಬದುಕು ಖುಷಿಯಾಗಿರುತ್ತದೆ. ನಾವು ನಮ್ಮವರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ನಮ್ಮ ಮನೆ . ನಮ್ಮ ಹೆಂಡತಿ ಮಕ್ಕಳು. ಪಾಲಕರು, ಬಂಧುಗಳು,
ಅಕ್ಕಪಕ್ಕದ ಮನೆಯವರು ಎಂಬ ಕಾಳಜಿಯು ಅತ್ಯವಶ್ಯವಾಗಿದ್ದರೇ ಬದುಕು ಸುಂದರವಾಗಿರುತ್ತದೆ. ನಾನು ಎಂಬುದನ್ನು ಮರೆತು ನಾವು ಎಂಬ ಕಾಳಜಿ ಇರಬೇಕು. ಅವರಿಗೆ ಆಗುವ ಕಷ್ಟಗಳನ್ನು ನಾವು ಬಗೆಹರಿಸುವ ಕಾಳಜಿ ಇರಬೇಕು. ಅನಾರೋಗ್ಯದಿಂದ ಬಳಲಿದವರ ಕಣ್ಣೀರೊರೆಸುವ ಸಮಯ ನಮ್ಮದಾಗಬೇಕು ಆಗ ಬದುಕು ಸುಂದರ ಸುಮಧುರ.
.
ನಂಬಿಕೆ : ನಮ್ಮಲ್ಲಿ ನಂಬಿಕೆ ಇಂದು ಮಣ್ಣಿನ ಮಡಕೆಯಂತೆ ಆಗಿದೆ. ಮಡಕೆ ಹೇಗೆ ತನ್ನ ಆಯಸ್ಸನ್ನು ಹೊಂದಿರುತ್ತದೆಯೋ ಆಗೆಯೇ ನಂಬಿಕೆ ಎಂಬುದು ಕ್ಷಣ ಆಯಸ್ಸನ್ನು ಹೊಂದಿದೆ. ಇಂದು ಗಂಡನ ಮೇಲೆ ಹೆಂಡತಿಗೆ ನಂಬಿಕೆ ಇಲ್ಲ. ಹೆಂಡತಿಯ ಮೇಲೆ ಗಂಡನಿಗೆ ನಂಬಿಕೆ ಇಲ್ಲ. ಇನ್ನೂ ಹತ್ತಿರವಾದರೇ ಮಕ್ಕಳು ನಮ್ಮನ್ನು ಸಾಕಿ ಸಲಹುತ್ತಾರೆಂಬ ನಂಬಿಕೆ ಪಾಲಕರಲ್ಲೇ ಇಲ್ಲ. ಹೀಗೆ ಇರುವಾಗ ಇಲ್ಲಿ ಬದುಕನ್ನು ಹಸನು ಮಾಡಿಕೊಳ್ಳಲು ನಂಬಿಕೆ ಅತೀ ಮುಖ್ಯ. ‘‘ಒಮ್ಮೆ ನಂಬಿದ ಬಳಿಕ ನಂಬಿಕೆ ಬಿಡಬೇಡ. ನಂಬಿ ಕೆಟ್ಟರೇ ಯಾರನ್ನು ನಂಬಬೇಡ’’ ಎಂಬ ಸ್ವಾಮಿ ವಿವೇಕಾನಂದರ ಮಾತು ನಿಜಕ್ಕೂ ಇಂದು ಪ್ರಸ್ತುತ. ಹಾಗಾಗಿ ನಂಬಿಕೆ ಇದ್ದರೇ ಬದುಕು ಸುಂದರ ಸುಮಧುರ.
ವಿಶ್ವಾಸ : ಓಡುವ ನದಿ ಸಾಗರಕೆ ಸೇರಲೇಬೇಕು... ನಾನು ನೀನು ಎಂದಾದರೂ ಸೇರಲೇ ಬೇಕು ಎಂಬ ಕವಿವಾಣಿ ಕಿವಿಯಲ್ಲಿ ರಿಂಗಣಿಸುತ್ತದೆ. ಯಾಕಂದ್ರೆ ಬದುಕಿನಲ್ಲಿ ವಿಶ್ವಾಸ ಅತಿ ಮುಖ್ಯ ಬದುಕು ಸುಂದರವಾಗಿರಲು ವಿಶ್ವಾಸವೂ ಅತ್ಯಮೂಲ್ಯವಾದುದು. ವಿಶ್ವಾಸ ಇಲ್ಲದೆ ಯಾವುದೇ ಕೆಲಸವನ್ನು ಹೇಗೆ ಮಾಡಲು ಸಾಧ್ಯವಿಲ್ಲವೋ ಹಾಗೆಯೇ ವಿಶ್ವಾಸ ಇಲ್ಲದೆ ಬದುಕನ್ನು ಕಟ್ಟಿಕೊಳ್ಳುವುದು ಅಸಾಧ್ಯ. ಹಾಗಾಗಿ ಪ್ರತಿ ಸಾರಿಯೂ ವಿಶ್ವಾಸವೂ ಪ್ರಮುಖವಾಗುತ್ತಲೇ ಹೋಗುತ್ತಲೇ ಹೋಗುತ್ತದೆ. ಹಾಗಾಗಿ ವಿಶ್ವಾಸವಿದ್ದರೇ ಬದುಕು ಸುಂದರ ಸುಮಧುರ.
ಆತ್ಮಸಾಕ್ಷಿ: ನಾವು ಜಗತ್ತಿನಲ್ಲಿ ಯಾರನ್ನಾದರೂ ಏಕೆ ದೇವರನ್ನು ಮೋಸ ಮಾಡಬಹುದು ಆದರೇ ಆತ್ಮಸಾಕ್ಷಿಯನ್ನು ಮೋಸ ಮಾಡಲು ಸಾದ್ಯವಿಲ್ಲ. ಯಾಕಂದ್ರೆ ನಮಗೆ ನಮ್ಮ ಆತ್ಮ ಸಾಕ್ಷಿಯೇ ಮುಖ್ಯ ಯಾವುದೇ ಕೆಲಸ ಮಾಡಿದರೂ ಆತ್ಮಸಾಕ್ಷಿಯ ವಿರುದ್ದವಾಗಿ ಮಾಡಲಾಗುವುದಿಲ್ಲ. ಸದಾ ಕಾಲವೂ ನಾವು ಆತ್ಮಸಾಕ್ಷಿಯ ಜೊತೆಗೆ ಮಾತನಾಡುತ್ತಲೇ ಇರುತ್ತೇವೆ. ಹಾಗಾಗಿ ಆತ್ಮಸಾಕ್ಷಿ ಇದ್ದರೇ ಬದುಕು ಸುಂದರ ಸುಮಧುರ.
ಸವಾಲು: ಸವಾಲುಗಳು ಇಂದು ಕ್ಷಣ ಕ್ಷಣಕ್ಕೂ ಬರುತ್ತಿರುತ್ತವೆ. ಬದಲಾಗುತ್ತಿರುತ್ತವೆ ಇಲ್ಲಿ ಬದುಕು ಎಂಬುದು ಸುಂದರವಾಗಲು ಸವಾಲುಗಳಿರಬೇಕು. ಯಾಕಂದ್ರೆ ನಮಗೆ ಸವಾಲುಗಳಿಲ್ಲದೇ ಹೋದರೇ ಬದುಕನ್ನು ಸುಂದರವಾಗಿಸಲು ಸಾಧ್ಯವಿಲ್ಲ. ಬೇರೆಯವರಂತೆ ಇರಬೇಕು. ಇಲ್ಲಾ ಬೇರೆಯವರಿಗೆಂತ ಭಿನ್ನವಾಗಿ ಬದುಕಬೇಕೆಂದರೇ ಸವಾಲುಗಳನ್ನು ಎದುರಿಸಬೇಕು. ಸವಾಲೆಂಬ ಸವಾಲುಗಳು ನಮ್ಮನ್ನು ಕಾಡುತ್ತಿರಬೇಕು. ಇದನ್ನು ಮೆಟ್ಟಿನಿಂತು ನಾನು ಮುನ್ನಡೆಯುವೆ ಎಂಬ ಆಶಾ ಭಾವ ನಮ್ಮಲ್ಲಿ ಮೂಡಬೇಕು. ಈ ಸವಾಲುಗಳನ್ನ ದಾಟಿ ನಾನು ಜಯಸಾಧಿಸಿದೆ ಎಂಬ ಹೆಮ್ಮೆ ಇರಬೇಕು ಆಗ ಬದುಕಿನ ಅರ್ಥ ತಿಳಿಯತ್ತದೆ ಹಾಗಾಗಿ ಸವಾಲುಗಳಿದ್ದರೇ ಅಲ್ಲಿ ನಮ್ಮ ಬದುಕು ಸುಂದರ ಸುಮಧುರ.
ಅವಲಂಬನೆ : ಇಂದು ನಾವು ಅವಲಂಬನೆಯ ಬದುಕಿನಲ್ಲಿ ಸಾಯುತ್ತಿದ್ದೇವೆ. ಅಪ್ಪನ ಆಸ್ತಿ ಇದೆ ಎಂಬ ಕಾರಣಕ್ಕೆ, ಅಪ್ಪನ ಆಸ್ತಿಯ ಅವಲಂಬನೆಗೆ ನಾನು ಜೋತು ಬಿದ್ದಿದ್ದೇವೆ. ನನ್ನ ಹಿತದೃಷ್ಟಿಯಲ್ಲಿ ನಾವು ಯಾರ ಅವಲಂಬನೆಯಲ್ಲಿಯೂ ಬದುಕಬಾರದು. ಬದುಕನ್ನು ನಾವೇ ರೂಪಿಸಿಕೊಂಡು ಬಾಳಬೇಕು. ಯಾವುದೇ ಒಬ್ಬ ವ್ಯಕ್ತಿ ಎಲ್ಲವನ್ನು ಕಳೆದುಕೊಂಡಾಗ ಅಥವಾ ಏನೂ ಇಲ್ಲವಾದಾಗ ಆತನನ್ನು ಯಾರು ನೋಡುವುದಿಲ್ಲ. ಆದರೇ ಆತನ ಬಳಿ ಎಲ್ಲವೂ ಬಂದಾಗ ಎಲ್ಲರೂ ಬರುತ್ತಾರೆ ಎಂಬಂತೆ ಇಲ್ಲಿ ಅವಲಂಬನೆ ಇಲ್ಲದ ಬದುಕು ಸುಂದರವಾಗಿತ್ತದೆ. ನಾವು ಅವಲಂಬಿಸಿದರೇ ಅವರು ಖಾಲಿಯಾದಾಗ ನಾವು ಖಾಲಿಯಾಗುತ್ತೇವೆ. ಹಾಗಾಗಿ ಅವಲಂಬನೆ ಇಲ್ಲದ ಬದುಕು ಸುಂದರ ಸುಮಧುರ.
ಆಕಾಂಕ್ಷೆ: ನಾನು ಡಾಕ್ಟರ್ ಆಗಬೇಕು. ನಾನು ಇಂಜಿನಿಯರ್. ಮೇಷ್ಟ್ರು. ಗುತ್ತಿಗೆದಾರ. ಪೋಲಿಸ್ ಆಗಬೇಕು ಹೀಗೆ ಎಲ್ಲರೂ ನಾನೇನು ಆಗಬೇಕು ಎಂಬ ಆಕ್ಷಾಂಕ್ಷೆಯನ್ನು ಹೊಂದಿರುತ್ತಾರೆ ಹಾಗೆ ಮೊದಲು ನಾನು ಉತ್ತಮ ನಾಗರಿಕನಾಗಬೇಕು ಎಂಬ ಆಕಾಂಕ್ಷೆಯನ್ನು ಹೊಂದಬೇಕಲ್ಲವೆ. ಹಾಗಾಗಿ ಇಲ್ಲಿ ನಮ್ಮಲ್ಲಿ ಗಗನದೆತ್ತರಕ್ಕೆ ಇರುವ ಕನಸುಗಳಲ್ಲಿ ಆಕಾಂಕ್ಷೆಗಳು ಇರುತ್ತವೆ. ಹುಡುಗಿಯರು ನಾನು ಶ್ರೀಮಂತ ಕುಟುಂಬದ ಸೊಸೆಯಾಗಬೇಕು ಎಂದು ಅಂದುಕೊಳ್ಳುತ್ತಾರೆ. ಅದೇ ರೀತಿ ನಾನು ನಮ್ಮ ಹುಟ್ಟೂರಿನಲ್ಲಿ ಒಂದು ಸುಂದರ ಮನೆ ಕಟ್ಟಬೇಕೆಂಬ ಆಕಾಂಕ್ಷೆ ಹೊಂದಿದ್ದೇನೆ. ಹೀಗೆ ನಾನಾ ಆಕಾಂಕ್ಷೆಗಳನ್ನು ಅವರವ ಭಾವಕ್ಕೆ ತಕ್ಕಂತೆ ಹೊಂದಿರುತ್ತಾರೆ. ಬದುಕು ಸುಂದರವಾಗಿರಲು ಸಹಜವಾಗಿ ಆಕಾಂಕ್ಷೆಗಳು ಅತ್ಯವಶ್ಯ ಏಕೆಂದರೆ ಬದುಕಿನಲ್ಲಿ ಆಕಾಂಕ್ಷೆಗಳಿರಬೇಕು. ಆಕಾಂಕ್ಷೆಗಳು ಈಡೇರಬೇಕು ಆಕಾಂಕ್ಷೆಗಳಿದ್ದರೇ ಬದುಕು ಸುಂದರ ಸುಮಧುರ.
ಸಹಜತೆ : ಬದುಕಿನಲ್ಲಿ ಮನುಷ್ಯನಿಗೆ ಸಹಜತೆ ಇರಬೇಕು. ನಾನಂತು ತುಂಬಾ ಸಹಜವಾಗಿರಬೇಕೆಂದು ಬಯಸುವವನು. ಕೆಲವರು ಅವರಲ್ಲಿ ಇಲ್ಲದನ್ನ ಇದೆ ಎಂದು ತೋರಿಸುತ್ತಾರೆ. ಕೆಲವರು ಸಹಜತೆಯನ್ನು ಬದಿಗೊತ್ತಿ ಕೃತಕವಾಗಿ ಮಾತನಾಡುತ್ತಾರೆ. ತಮ್ಮ ದಿನ ನಿತ್ಯದ ಸಹಜತೆ ಬಿಟ್ಟು ಏನೆನೋ ಇದೆ ಎಂಬಂತೆ ತೋರ್ಪಡಿಸುತ್ತಾರೆ. ಇಲ್ಲಿ ಸಹಜತೆ ಅತೀ ಮುಖ್ಯ ಪ್ರೀತಿಸುವ ಗುಣ ಸಹಜವಾಗಿರಬೇಕು. ಗೆಳೆತನದ ಗುಣ ಸಹಜವಾಗಿರಬೇಕು ಆದರೇ ಅದು ಕೃತಕವಾಗಿರಬಾರದು. ಬೇರೆವರಿಗೆ ಇದು ಇವರದ್ದಲ್ಲ ಎನ್ನುವುದು ನೋಡುತ್ತಲೇ ತಿಳಿಯುತ್ತದೆ ಹಾಗಾಗಿ ಸಹಜತೆ ಇದ್ದರೇ ಬದುಕು ಸುಂದರ ಸುಮಧುರ.
ಸಿದ್ದತೆ : ನಾವು ಯಾವುದೇ ಕೆಲಸ ಮಾಡಲಿ, ಕೆಲಸ ಮಾಡಲು ಸನ್ನದ್ದರಾಗಲಿ ಅಲ್ಲಿ ಸಿದ್ದತೆ ಇದ್ದೆ ಇರುತ್ತದೆ. ಬದುಕಿನಲ್ಲಿ ಸಿದ್ದತೆ ಇರಬೇಕು. ಮದುವೆಯಾಗಬೇಕೆಂದರೇ ಅಲ್ಲಿ ಗಂಡಿಗೆ ಹೆಣ್ಣು. ಹೆಣ್ಣಿಗೆ ಗಂಡು ಸಿದ್ದವಾಗಿರಬೇಕು. ಅಲ್ಲದೆ ಸ್ವಲ್ಪವಾದರೂ ಅಲ್ಲಿ ಸಿದ್ದತೆಯನ್ನೂ ಮಾಡಿಕೊಳ್ಳದಿದ್ದರೇ ಬದುಕನ್ನು ಸುಂದರವನ್ನಾಗಿಸುವುದಾದರೂ ಹೇಗೆ. ಹಾಗಾಗಿ ಬದುಕು ಸುಂದರವಾಗಿರಬೇಕೆಂದರೇ ಸಿದ್ದರೆ ಅತ್ಯಗತ್ಯ ಎಂಬುದು ಮಾತ್ರ ಸತ್ಯ.
ವಿವೇಚನೆ : ವಿವೇಚನೆ ಎಂಬುದು ವಿಶಾಲತೆಯನ್ನು ತೋರಿಸುತ್ತದೆ. ವಿಶಾಲತೆಯು ಇಲ್ಲಿ ಎಲ್ಲವನ್ನು ಒಳಗೊಂಡಿದೆ ಏಕೆಂದರೆ ವಿವೇಚನೆಯಿಂದ ನಾವು ವರ್ತಿಸಿದಾಗ ಮಾತ್ರ ನಾವು ಬದುಕಿನಲ್ಲಿ ಗೆಲುವು ಸಾಧಿಸಲು ಸಾದ್ಯ. ವಿವೇಚನೆಯಿಂದ ಹೆಜ್ಜೆ ಇಟ್ಟರೇ ಮಾತ್ರ ಬದುಕನ್ನು ಸುಂದರವಾಗಿಸಬಹುದು. ವಿವೇಚನೆ ಇಲ್ಲದೇ ನಾವು ದುಡುಕಿ ಏನನ್ನಾದರೂ ಮಾಡಿಕೊಂಡಲ್ಲಿ ಬದುಕು ಬರ್ಬತ್ಆಗಿಹೋಗುತ್ತದೆ. ಹಾಗಾಗಿ ನಮ್ಮಲ್ಲಿ ವಿವೇಚನೆ ಇದ್ದರೇ ಬದುಕು ಸುಂದರ ಸುಮಧುರ.
ಮೌನ : ಮಾತು ಬೆಳ್ಳಿ ಮೌನ ಬಂಗಾರ ಎಂಬ ಗಾದೆ ಮಾತಿದೆ. ಬದುಕಿನಲ್ಲಿ ಮಾತೇ ಮುಖ್ಯವಲ್ಲ. ಮೌನವೂ ಅತೀ ಮುಖ್ಯ. ಮಾತೆಂಬುದು ಜೋರ್ತಿಲಿಂಗ ಅನ್ನುತ್ತಾರೆ. ಆದರೇ ಕೆಲವು ವೇಳೆ ಮಾತೇ ಮೃತ್ಯುವಾಗಿ ಬಿಡುತ್ತದೆ. ಬದುಕಿನಲ್ಲಿ ಮಾತನಾಡಿ ಸೋಲುವುದಕ್ಕಿಂತ ಮೌನವಾಗಿದ್ದುಕೊಂಡು ಗೆಲ್ಲಬೇಕು. ಮಾತನ್ನು ಮೌನದಿಂದಲೇ ಸೋಲಿಸಬಹುದು. ಕೆಲವೊಮ್ಮೆ ಮಾತುಗಳು ನಮ್ಮ ಜೀವಕ್ಕೆ ಅಪಾಯ ತರುತ್ತವೆ. ಆದರೆ ಮೌನ ಜೀವನ್ನು ಉಳಿಸುತ್ತದೆ. ಅದು ಹೇಗೆ ಎಂದು ಚಿಂತಿಸುವಿರಾ. ಅಪಾಯಗಳು ಎದುರಾದಾಗ ನೀವು ಮಾತನಾಡಿ ನೋಡಿ ..ಇಲ್ಲಾ ಮೌನವಾಗಿದ್ದು ನೋಡಿ ಯಾವುದು ದೊಡ್ಡದು ಎಂಬುದು ಹಾಗಾಗಿ ನನ್ನ ಪ್ರಕಾರ ಮೌನವಾಗಿದ್ದರೇ ಬದುಕು ಸುಂದರ ಸುಮಧುರ.
ವರ್ತನೆ: ಬದುಕು ಅಂದರೆ ಅಲ್ಲಿ ಎಲ್ಲವೂ ಇರುತ್ತದೆ. ನಾವು ಇನ್ನೊಬ್ಬರ ಜೊತೆಯಾವ ರೀತಿ ವರ್ತಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾನೇ ಕೆಲವೊಮ್ಮೆ. ಸಿಟ್ಟಿನಿಂದ ವರ್ತಿಸುತ್ತೇನೆ. ಕೆಲವೊಮ್ಮೆ ಶಾಂತಿಯಿಂದಲೇ ಗೆಲ್ಲುತ್ತೇನೆ. ಬದುಕು ಸುಂದರವಾಗಲು ನಾಯಕತ್ವವೂ ಬೇಕು. ಸೇವಕತ್ವವೂ ಇರಬೇಕು ಇಲ್ಲಿ ಪ್ರತಿಕ್ಷಣದಲ್ಲಿಯೂ ವರ್ತನೆ ಕ್ರೀಯಾಶೀಲವಾಗಿರುತ್ತದೆ. ಅಲ್ಲದೆ ನಮ್ಮ ವರ್ತನೆ ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಇಲ್ಲಾ ಕೆಲವು ವೇಳೆ ಆ ಸಂದರ್ಭದಲ್ಲಿ ನಿಮ್ಮ ವರ್ತನೆ ಕೆಲವರಿಗೆ ಕಿರಿ ಕಿರಿ ತರಬಹುದು ಆದರೇ ನೀವು ಒಳ್ಳೆಯವರೇ ಆಗಿರುತ್ತೀರಿ ಆದರೇ ಅಲ್ಲಿ ನಮ್ಮ ವರ್ತನೆಗಳು ಬೇಸರಿಸುತ್ತವೆ. ಹಾಗಾಗಿ ವರ್ತನೆಗಳು ನಮ್ಮ ಹಿಡಿತದಲ್ಲಿದ್ದರೇ ಬದುಕು ಸುಂದರ ಸುಮಧುರ.
ಅಹಂ: ಮನುಷ್ಯನಲ್ಲಿ ಇಂದು ಅಹಂ ಎಂಬುದು ತನ್ನೊಂದಿಗೆ ಸದಾ ಇರುತ್ತದೆ. ಅದನ್ನು ತೊಡೆದು ಹಾಕಿದಾಗ ಮಾತ್ರ ನಾವು ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಉದಾಹರಣೆಗೆ ಒಬ್ಬ ಶ್ರೀಮಂತನ ಮಗನೋ ಮಗಳೋ ಮದುವೆಯಾಗುವಾಗ ಅವನು ಬೇರೆಯವರನ್ನು ಗುರಿಯಾಗಿಸಿಕೊಂಡೆ ವಿವಾಹವಾಗುವುದು. ಅದು ಅನೇಕರಿಗೆ ಇರಿಸು ಮುರಿಸು ಉಂಟು ಮಾಡುತ್ತದೆ ಅಲ್ಲದೆ ಅವರೊಟ್ಟಿಗೆ ಇರುವ ವೇಳೆಯೂ ಅವರನ್ನು ಹಿಂಸೆಗೀಡು ಮಾಡುತ್ತದೆ. ಹಾಗಾಗಿ ಅಹಂ ಎಂಬುದನ್ನು ತೊಡೆದು ಹಾಕೋಣ ಅಲ್ಲದೆ ಅದು ಎಂದೂ ನಮ್ಮ ಬಳಿ ಸುಳಿಯದಂತೆ ನೋಡಿಕೊಂಡರೇ ಬದುಕು ಸುಂದರ ಸುಮಧುರ.
ಅಚ್ಚುಕಟ್ಟುತನ: ನಮ್ಮ ಬದುಕಿನಲ್ಲಿ ಯಾವುದೇ ಕೆಲಸ ಮಾಡಿದರು ಅದು ಅಚ್ಚು ಕಟ್ಟಾಗಿ ಇರಬೇಕು. ಅದು ಎಲ್ಲರು ನಿಂತು ಗೌರವಿಸುವಂತೆ ಇರಬೇಕು. ಮಾನವನ ಜೀವಿತಾವಧಿಯಲ್ಲಿ ಎಲ್ಲವನ್ನು ಗೆಲ್ಲಬಲ್ಲ ಶಕ್ತಿ ಅಡಗಿರುತ್ತದೆ. ಇಲ್ಲಿ ಗೆಲುವನ್ನು ಗೆಲುವಾಗಿ ನೋಡುವ ಆಸೆ ಇರಬೇಕಾದರೇ ಕೆಲಸದಲ್ಲಿ, ಮಾತಲ್ಲಿ, ನಡೆ ನುಡಿಯಲ್ಲಿ ಅಚ್ಚುಕಟ್ಟುತನ ವಿರಬೇಕು. ನಾವೆಲ್ಲರೂ ಜಗದ ಜೊತೆಗೆ ಬದುಕುತ್ತಿರುವುದರಿಂದ ಅಚ್ಚುಕಟ್ಟುತನವನ್ನು ಪಾಲಿಸೋಣ ಅಚ್ಚುಕಟ್ಟುತನ ನಮ್ಮಲ್ಲಿ ಇದ್ದರೇನ ಬದುಕು ಸುಂದರ ಸುಮಧುರ.
ಸಮಯ ಪಾಲನೆ: ನಾವು ಸದಾಕಾಲವು ಸಮಯದ ಜೊತೆಗೆ ಬದುಕುಸಾಗಿಸುವಂತಾಗಿದೆ. ಸಮಯವು ನಮ್ಮನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದೆ. ನಾವು ಗಡಿಯಾರದೊಂದಿಗೆ ಓಡುತ್ತಿದ್ದೇವೆ. ಗಡಿಯಾರವೇ ನಮ್ಮನ್ನು ತನಗೆ ಹೇಗ ಬೇಕೋ ಹಾಗೆ ನಿಯಂತ್ರಿಸುವ ಶಕ್ತಿ ಪಡೆದಿದೆ. ಬೆಳಗ್ಗೆ ಏಳುವಾಗಲು ನಾವು ಸಮಯವನ್ನು ನೋಡಿಕೊಂಡೇ ಏಳುತ್ತೇವೆ, ತಿಂಡಿ ಊಟ, ಸ್ನಾನ, ಡ್ಯೂಟಿ ಎಲ್ಲವೂ ಸಮಯದಂತೆ ಆಗುತ್ತಿದೆ. ಆದರೇ ಕೆಲವೊಮ್ಮೆ ಸಮಯ ಪಾಲನೆ ಮಾಡದೆ ನಾವು ಇರುತ್ತೇವೆ ರಾತ್ರಿ ಯಾವಾಗಲೋ ಮಲಗುವುದು. ಬೆಳಗ್ಗೆ ಸೂರ್ಯ ಹುಟ್ಟಿದ ಮೇಲೆ ಏಳುವುದು ಒಟ್ಟು ಸಮಯ ಪಾಲನೆಯನ್ನು ರೂಢಿಸಿಕೊಳ್ಳೋಣ. ಸಮಯ ಪಾಲನೆ ಮಾಡಿದರೇ ಬದುಕು ಸುಂದರ ಸುಮಧುರ.
ಹೀಗೆ ಎಲ್ಲವನ್ನು ನಾವಂದು ಕೊಂಡತೆ ಮಾಡಿದರೇ ಬದುಕು ಸುಂದರ ಸುಮಧುರವಾಗಿರುತ್ತದೆ. ಬನ್ನಿ ಇಂದಿನಿಂದ ನಮ್ಮ ಬದುಕನ್ನ ನಾವೇ ರೂಪಿಸಿಕೊಳ್ಳೋಣ. ಎಲ್ಲರಿಗಿಂತ ಮಾದರಿಯಾಗಿ ಬದುಕೋಣ.
ವಂದನೆಗಳೊಂದಿಗೆ
ಮಾಲತೇಶ್ ಅರಸ್ ಹರ್ತಿಮಠ, ಪತ್ರಕರ್ತರು.
ವಿಜಯವಾಣಿ. ಬೆಂಗಳೂರು 9480472030
Thursday, November 6, 2014
ಬಿಡದಿಯಲ್ಲಿ ಸಂಭ್ರಮದ ಕನ್ನಡ ನುಡಿ ಹಬ್ಬ:ಮಾಲತೇಶ್ ಅರಸ್ _Malathesh Urs
ಜಾನಪದ ಕಲಾವಿದರ ಜನಗಣತಿಯಾಗಬೇಕು: ಡಾ.ಎಸ್ ಬಾಲಾಜಿ ಒತ್ತಾಯ
* ಕಾಲೇಜಿನಲ್ಲಿ ಅರಳಿದ ಕನ್ನಡದ ಹಬ್ಬ * ಸಾಂಸ್ಕೃತಿಕ, ಜಾನಪದ ಗೀತಗಾಯನ
* ದಾನಿಗಳಿಗೆ, ಸಾಧಕರಿಗೆ ಸನ್ಮಾನ * ವೈಭವದ ಉತ್ಸವಕ್ಕೆ ವಿದ್ಯಾರ್ಥಿಗಳು ಸಾಥ್
ಬಿಡದಿ: ಅಲ್ಲಿ ನಲಿವು, ಸಂಭ್ರಮ, ಕುಣಿತ, ಕೇಕೆ, ನಗುವಿತ್ತು, ಜಾನಪದ ಗೀತೆ, ತತ್ವಪದ, ಕೋಲಾಟ ಪದಗಳ ಹಬ್ಬ ಬಿತ್ತು, ವಿದ್ಯಾರ್ಥಿಗಳ ಮಾತೂ ಇತ್ತು, ಅಜ್ಜಿ ಹಾಡಿದ ಸೋಬಾನೆ ಹಾಡುಗಳ ಊಟ, ಕಲಾವಿದ ನಲಿದಾಟ, ಪ್ರಾಚಾರ್ಯರ ಏಕಪಾತ್ರಾಭಿನಯ, ಉಪನ್ಯಾಸಕರ ಉಲ್ಲಾಸ, ಸಾಂಸ್ಕೃತಿಕ ಕಾರ್ಯಕ್ರಮದ ಸೊಗಡು, ಸೀರೆತೊಟ್ಟ ವಿದ್ಯಾರ್ಥಿನಿಯರು. ಕನ್ನಡಾಂಬೆಗೆ ಪುಷ್ಪನಮನ. ದಾನಿಗಳಿಗೆ, ಸಾಧಕರಿಗೆ ಸನ್ಮಾನ. ನಾಡಗೀತೆ ಬೆನ್ನಲ್ಲೇ ಈ ನಾಡಿನ ಎಲ್ಲಾ ಸಂಸ್ಕೃತಿಗಳಿಗೂ ಚೈತನ್ಯ ತುಂಬುವ ಮೂಲ ಕೃಷಿ ಸಂಸ್ಕೃತಿಗೆ ನಮಿಸುವ ರೈತಗೀತೆ ಮೊಳಗಿತು. ಜತೆಗೆ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಕುರಿತ ಭಾಷಣವೂ ಇತ್ತು.
ಹೌದು ಅದು ಕನ್ನಡ ನುಡಿ ಹಬ್ಬ, ಸಂತೋಷದ ಹಬ್ಬ, ವಿದ್ಯಾರ್ಥಿಗಳು, ಉಪನ್ಯಾಸಕರು, ಕಲಾವಿದರು, ಹಾಡುಗಾರರು, ಸಾಧಕರು, ದಾನಿಗಳು ಮಕ್ಕಳೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಿದ ಹಬ್ಬ.
ಬಿಡದಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಮಾತೃಭೂಮಿ ಯುವಕರ ಸಂಘ, ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 59ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ಕನ್ನಡ ನುಡಿ ಹಬ್ಬ ನಿಜಕ್ಕೂ ಅರ್ಥ ಪೂರ್ಣವಾಗಿತ್ತು. ಪ್ರತಿಭಾನ್ವಿತ ಕಲಾವಿದರ ಹಾಡುಗಳ ಬಂಡಿ ಎಲ್ಲರೂ ಚಪ್ಪಾಳೆಯ ಮಳೆಗೈದರು.
ಕನ್ನಡ ನುಡಿ ಹಬ್ಬವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಸಂಚಾಲಕ ಡಾ. ಎಸ್. ಬಾಲಾಜಿ ಮಾತನಾಡಿ, ಕನ್ನಡ ಹಬ್ಬ ಕೇವಲ ನವೆಂಬರ್ಗೆ ಸೀಮಿತವಾಗಿದೆ ಇದು 365 ದಿನವೂ ನಡೆಯಬೇಕು. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ನೀವೂ ಕಲಾವಿದರಾಗಬೇಕು ಎಂದರು ಸರ್ಕಾರ ಜಾತಿ ಗಣತಿಯಂತೆ ಪ್ರಮುಖವಾಗಿ ಜಾನಪದ ಕಲಾವಿದರ ಜನಗಣತಿಯನ್ನು ಮಾಡಬೇಕೆಂದು ಒತ್ತಾಯಿಸಿದರು.
ನಮ್ಮ ಪರಿಷತ್ತಿನ ಮಾತೃಭೂಮಿ ಯುವಕ ಸಂಘದ ಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರಿ ಮುಟ್ಟಿದ್ದಾರೆ. ನಿಮಗೂ ಅವಕಾಶ ನೀಡುತ್ತೇವೆ ನೀವು ಜಾನಪದದ ಮತ್ತು ಕನ್ನಡ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯವಾಣಿ ಹಿರಿಯ ಉಪ ಸಂಪಾದಕ ಮಾಲತೇಶ್ ಅರಸ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಬೇಕು. ಹೊಸತನದ ಪ್ಯಾಷನ್ಗೆ ಮಾರುಹೋಗಿ ನಾವು ನಮ್ಮಲ್ಲಿ ಹುದುಗಿರು ಸುಪ್ತ ಪ್ರತಿಭೆಯನ್ನು ಹೊರಹಾಕದೇ ದೂರ ಉಳಿದಿದ್ದೇವೆ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯಿಕ, ಸಾಂಸ್ಕೃತಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಇಂದು ಮಾಲ್ ಸಂಸ್ಕೃತಿ ಬಂದು ನಮ್ಮೂರ ಸಂತೆಗಳೇ ಮಾಯವಾಗುತ್ತಿವೆ. ಕ್ರಾಪ್ಟ್ ಟೀಚರ್, ದೈಹಿಕ ಶಿಕ್ಷಕರಂತೆ ಸಾಂಸ್ಕೃತಿಕ ಅಧ್ಯಾಪಕರ ಅವಶ್ಯತೆ ಇದೆ. ದೃಶ್ಯ ಮಾಧ್ಯಮದ ಹಿಂದೆ ಹೋಗುವ ಇಂದಿನ ಯುವ ಪೀಳಿಗೆ ಪತ್ರಿಕೆಗಳನ್ನು ಅಧ್ಯಯನ ಮಾಡಿ ಜ್ಞಾನ ವೃದ್ದಿಸಿಕೊಳ್ಳಬೇಕು. ಕನ್ನಡ- ಕನ್ನಡಿಗ- ಕರ್ನಾಟಕ ಎಂಬುದನ್ನು ನಾವು ಪಾಲಿಸಿದರೇ ಮಾತ್ರ ರಾಜ್ಯೋತ್ಸವಕ್ಕೆ ಒಂದು ಅರ್ಥ ಎಂದರು.
ರಾಜ್ಯದಲ್ಲಿ ಐಎಎಸ್ ಮತ್ತು ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಆಡಳಿತದಲ್ಲಿ ಕನ್ನಡ ಭಾಷೆ ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಅತಿಥಿಯಾಗಿ ರಾಮನಗರ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯೇ ಕನಕ ತಾರಾ ಮಾತನಾಡಿ, ಕನ್ನಡ ನಾಡಿನಲ್ಲಿ ಅನೇಕರು ಐತಿಹಾಸಿಕ ಪುರುಷರಿದ್ದಾರೆ. ಅದನ್ನೆಲ್ಲಾ ನಾವು ತಿಳಿದುಕೊಳ್ಳಬೇಕು.ನಾವು ಇತಿಹಾಸನ್ನು ತಿಳಿದರೇ ಕನ್ನಡದ ಶಕ್ತಿ ತಿಳಿಯುತ್ತದೆ. ಕನ್ನಡದ ಹಬ್ಬದಲ್ಲಿ ಕೇವಲ ಸಂಭ್ರಮವಷ್ಟೇ ಅಲ್ಲ ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅನುಕೂಲವಾಗುತ್ತಿದೆ ಎಂದರು. ಜಾನಪದ ಕಲಾವಿದ ಈ ಹಾಡುಗಳನ್ನು ಕೇಳುತ್ತಿದ್ದರೇ ನಾಶವಾಗುತ್ತಿವೆ ಎಂದು ಕೆಲವರು ಹೇಳುವ ಮಾತು ಸುಳ್ಳು ಎನಿಸುತ್ತಿದೆ. ನಮ್ಮನ್ನು ನಾವು ಪ್ರೀತಿಸುವಂತೆ ಕನ್ನಡವನ್ನು ನಾವು ಪ್ರೀತಿಸಬೇಕು,ಆರಾಧಿಸಬೇಕು ಎಂದರು.
ಬಿಡದಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೊಡ್ಡರಸಿನಕೆರೆ ಮಾಯಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮೆರಿಕಾದಲ್ಲಿರುವ ಹೆಚ್ಚು ವೈದ್ಯರು, ವಿಜ್ಞಾನಿಗಳು, ಇಂಜಿನಿಯರ್ಗಳು ಭಾರತದವರು ಎಂಬುದನ್ನು ಮರೆಯಬಾರದು. ಅದರಲ್ಲಿ ಕನ್ನಡಿಗರೇ ಹೆಚ್ಚು, ಕರ್ನಾಟಕವನ್ನು ತುಂಡು ಮಾಡುವ ಮಾತುಗಳನ್ನಾಡು ಕೆಲವರಿಗೆ ಕಡಿವಾಣ ಹಾಕಬೇಕು. ಎನ್ನುತ್ತಲೇ ಮಯೂರ ವರ್ಮಾರ ಏಕಪಾತ್ರಾಭಿನಯದ ಸಂಭಾಷಣೆಯನ್ನು ಹೇಳಿ ಎಲ್ಲರೂ ದಂಗಾಗುವಂತೆ ಮಾಡಿದರು.
ಮಾತೃಭೂಮಿ ಯುವಕರ ಸಂಘದ ಮತ್ತು ಜಾನಪದ ಪರಿಷತ್ತಿನ ಕಲಾವಿದರರಿಂದ ಹಾಡುಗಳು ಮೇಳೈಸಿದವು. ಸುಗ್ಗಿ ಸಿರಿಯ ಕುಣಿತ, ಶ್ರಮ ಸಂಸ್ಕೃತಿಯ ಗೀತೆ, ಜನಪದ ಹಾಡುಗಳು, ಸೋಲಿಗರ ಸಂಸ್ಕೃತಿಯ ಗೀತೆಗಳು, ತಮಟೆ ಸೇರಿ ವಿವಿಧ ಪರಿಕರಗಳ ಸದ್ದು ಕಾಲೇಜು ಆವರಣವನ್ನು ರಂಗಾಗಿಸಿತು.
ಇದೇ ವೇಳೆ ಜಾನಪದ ಗಾಯಕಿ ಸೋಬಾನೆ ಕೆಂಪಮ್ಮ, ವಂದೇಮಾತರಂ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಮಾಲತೇಶ್ ಅರಸ್, ಜಾನಪದ ಪರಿಷತ್ನ ರಾಜ್ಯ ಸಂಚಾಲಕ ಡಾ.ಎಸ್.ಬಾಲಾಜಿ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಉಪಕರಣ ದಾನ ನೀಡಿರುವ ಅಬ್ಬನಕುಪ್ಪೆಯ ಸಿ.ಲೋಕೇಶ್ ಮತ್ತು ಅಂಗಡಿ ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.
ಅಂತರಾಷ್ಟ್ರೀಯ ಗಾಯಕ ಭೀಮಪ್ಪ ಕೆ.ಬೂದಿಹಾಳ್, ಸುಬ್ರಮಣಿ, ರಾಮು, ಅಜಿತ್, ರಘು, ತೂಬಿನಕೆರೆ ರಂಗಸ್ವಾಮಯ್ಯ, ಮಂಗಳಗೌರಿ ನೇತೃತ್ವದ ತಂಡಗಳು ಜಾನಪದ ಗೀತೆಗಾಯನ ಮತ್ತು ಜಾನಪದ ಕಲೆಗಳನ್ನು ಪ್ರದರ್ಶಿಸಿದರು. ಉಪನ್ಯಾಸಕರಾದ ಬಿ.ಎಂ.ಗಂಗಾಧರ್, ಜ್ಯೋತಿಲಕ್ಷ್ಮೀ ಹಿರೇಗೌಡ, ರಂಜನಿ ಇತರರು ಇದ್ದರು.
Wednesday, November 5, 2014
Subscribe to:
Posts (Atom)








.jpg)
.jpg)
.jpg)
.jpg)
.jpg)